ಸಿರವಾರ: ಸಮೀಪದ ಯರಮರಸ್ ಗ್ರಾಮದ ಆರಾಧ್ಯ ದೈವ ಶ್ರೀ ಗುಡ್ಡದ ಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಸೆ.7ರ ಸೋಮವಾರ ಜರುಗಲಿದೆ ಎಂದು ದೇವಸ್ಥಾನದ ಅರ್ಚಕ ಶ್ರೀಶೈಲ ಸ್ವಾಮಿ ಯರಮರಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ ಶ್ರೀ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ, ಬಳಿಕ ಮಹಾಗಣಾರಾಧನೆ ಹಾಗೂ ಮಹಾಪ್ರಸಾದ ಸಮರ್ಪಣೆ ಜರುಗಲಿದೆ.

ಸಂಜೆ 4 ಗಂಟೆಯಿಂದ ಯರಮರಸ್ ಗ್ರಾಮದಿಂದ ಗುಡ್ಡದ ಬಸವೇಶ್ವರ ದೇವಸ್ಥಾನದವರೆಗೆ ಸುಮಂಗಲೆಯರ ಕಳಸ, ಸಕಲ ವಾದ್ಯಗಳೊಂದಿಗೆ ಶ್ರೀ ನಾಗಯ್ಯ ಸ್ವಾಮಿ ಮಲದಕಲ್ ನೇತೃತ್ವದಲ್ಲಿ ಪುರವಂತಿಕೆ, ನಂದಿಕೋಲು ಸೇವೆಯೊಂದಿಗೆ ಪಲ್ಲಕ್ಕಿ ಉತ್ಸವ ನಡೆದು, ಸಂಜೆ 5ಕ್ಕೆ ಉಚ್ಛಾಯ ಮಹೋತ್ಸವ ಜರುಗಲಿದೆ.

ಸಂಜೆ 7ಕ್ಕೆ ಹರ ಗುರು ಚರಮೂರ್ತಿಗಳ ಆಶೀರ್ವಚನದೊಂದಿಗೆ ಶಿವಾನುಭವ ಗೋಷ್ಠಿ ನಡೆಯಲಿದೆ.

ಭಕ್ತಾದಿಗಳು ತನು-ಮನ-ಧನದಿಂದ ಸೇವೆ ಸಲ್ಲಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.

Previous articleಸಿರವಾರ ಮಡಿವಾಳ ಮಾಚಿದೇವ ಸಮಾಜದ ನಗರ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ